ಕಾಂಗ್ರೆಸ್ ಪಕ್ಷ ಅಡ್ರೆಸ್ ಉಳಿಸಿಕೊಳ್ಳಲು ಸಲಹೆ ಕೊಟ್ಟ ಸಂಸದ ಬಿ.ವೈ. ರಾಘವೇಂದ್ರ !

ಕರ್ನಾಟಕನ್ಯೂಸ್24.ಕಾಂ
ರಾಯಚೂರು: ಕಾಂಗ್ರೆಸ್ (Congress)ತುಷ್ಟಿಕರಣ ಪ್ರವೃತ್ತಿಯಿಂದ ಅವನತಿಯತ್ತ ಸಾಗುತ್ತಿದೆ. ಓಲೈಕೆ ಬಿಟ್ಟರೆ ಕಾಂಗ್ರೆಸ್ ಪಕ್ಷ (Congress) ಅಡ್ರೆಸ್ ಉಳಿಸಿಕೊಳ್ಳಲು ಸಾಧ್ಯ ಎಂದು ಶಿವಮೊಗ್ಗ ಸಂಸದ ಬಿ.ವೈ .ರಾಘವೇಂದ್ರ ಕೈ ನಾಯಕರಿಗೆ ಸಲಹೆ ನೀಡಿದರು.
ಶ್ರೀಶೈಲ ಜಗದ್ಗುರು ದ್ವಾದಶ ಪೀಠಾರೋಹಣ ಮಹೋತ್ಸ ವದ ನಿಮಿತ್ತ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಟಿಪ್ಪು ಸುಲ್ತಾನ್ ವಿಷಯದಲ್ಲಿ ನಮ್ಮ ಪಕ್ಷದ ನಿಲುವು ದೃಢ. ಓಟ್ ಬ್ಯಾಂಕ್ ಗಾಗಿ ಕೆಂಪೇಗೌಡ ಮತ್ತು ಟಿಪ್ಪು ಜತೆ ಹೋಲಿಕೆ ಮಾಡುವುದು ಅಕ್ಷಮ್ಯ ಅಪರಾಧ. ಯಾವುದೇ ಕಾರಣಕ್ಕೂ ಈ ರೀತಿಯ ಅಂತಹ ತಪ್ಪು ಎಸಗಬಾರದು. ಒಂದು ವೇಳೆ ಕಾಂಗ್ರೆಸ್ ತನ್ನ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಅವಸಾನಕ್ಕೆ ತಲುಪಲಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್, ಪ್ರಾದೇಶಿಕ ಪಕ್ಷಕ್ಕಿಂತಲ್ಲೂ ಹೀನ ಸ್ಥಿತಿಗೆ ತಲುಪಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಕುಟುಕಿದರು.
ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಕೆಲಸ ಗಳು ಆಗದೇ ಇದ್ದಾಗ ಆತಂಕ ಶುರುವಾಗುವುದು ಸಹಜ. ಅದೇ ರೀತಿ ಸಿದ್ಧರಾಮಯ್ಯನವರಿಗೂ ಆಗಿದೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಂಡಿದೆ ಎಂದು ಟೀಕಿಸಿದರು.
ರಾಜ್ಯ ರಾಜಕೀಯದ ಧಮ್ಮು-ತಾಕತ್ತು ವಿಚಾರವಾಗಿ ಮಾತನಾಡಿ, ತಿಂದದ್ದು ಸ್ವಲ್ಪ ಜೀರ್ಣ ಆಗದಿದ್ದಾಗ ಇಂತಹ ಪದಗಳು ಬರುತ್ತವೆ. ನಿಜವಾದ ತಾಕತ್ತು, ಧಮ್ಮು ಜನರು ತೋರಿಸುತ್ತಾರೆ. ಜನರೇ ಎಲ್ಲ ರಾಜಕಾರಣಿಗಳ ಮಾಲೀಕರು ಎಂದರು.
ಸಿದ್ದರಾಮಯ್ಯ ಕಂಡರೆ ಬಿಜೆಪಿ ನಾಯಕರಿಗೆ ಭಯವೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಬಗ್ಗೆ ನಮಗೆ ಗೌರವವಿದೆ. ಅವರಿಗೆ ಬಿಜೆಪಿ ನಾಯಕರನ್ನು ಟೀಕೆ ಮಾಡಲಿಲ್ಲವೆಂದರೆ ಸಮಾಧಾನ ಇರುವುದಿಲ್ಲ. ಅವರ ಟೀಕೆಗೆ ನಮ್ಮ ನಾಯಕರು ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.