ತಿಪ್ಪರಾಜು ವಿರುದ್ಧ ಕಾರ್ಯಕರ್ತರ ಪತ್ರ ಚಳವಳಿ ಪ್ರತಿರೋಧ!

ಕರ್ನಾಟಕ ನ್ಯೂಸ್24.ಕಾಂ
ರಾಯಚೂರು: ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಮಾಜಿ ಶಾಸಕ ತಿಪ್ಪರಾಜ ಹವಾಲ್ದಾರ್ ವಿರುದ್ಧ ಸ್ವ ಪಕ್ಷದ ಕಾರ್ಯಕರ್ತರು ಪತ್ರ ಚಳವಳಿ ನಡೆಸಿ ಪ್ರತಿರೋಧ ಒಡ್ಡಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ಗೆ ಕಾರ್ಯಕರ್ತರು ಪತ್ರ ಬರೆದಿದ್ದಾರೆ. ರಾಯಚೂರು ಗ್ರಾಮೀಣ ಕ್ಷೇತ್ರದಿಂದ ತಿಪ್ಪರಾಜು ಬದಲು ಬೇರೆ ನಾಯಕರಿಗೆ ಟಿಕೇಟ್ ನೀಡುವಂತೆ ಮನವಿ ಮಾಡಿ ದ್ದಾರೆ. ಚುನಾವಣೆ ಸಮೀಪಿಸುತ್ತಿದ್ದು, ಕಾರ್ಯಕರ್ತರ ಪತ್ರ ತಿಪ್ಪರಾಜು ಪಾಲಿಗೆ ಕಂಟಕವಾಗಲಿದೆ ಎನ್ನುವ ಊಹಾಪೋಹಗಳು ಕೇಳಿ ಬರುತ್ತಿವೆ.
ಇತ್ತೀಚೆಗೆ ಯರಗೇರಾದಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಸಿಎಂ ಬಸವರಸಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡ್ಡಿಯೂರಪ್ಪ ತಿಪ್ಪರಾಜು ಹವಾಲ್ದಾರ್ ರನ್ನೇ ಪಕ್ಷದ ಅಭ್ಯರ್ಥಿ ಎಂದು ಬಿಂಬಿಸಿದ್ದರು.
ಕಣದಲ್ಲಿ ಕಸರತ್ತು
ತಿಪ್ಪರಾಜು ಹವಾಲ್ದಾರ್ ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದಿಂದ ಈಗಾಗಲೇ ಒಂದು ಅವಧಿಗೆ ಶಾಸಕರಾಗಿ ತಿಪ್ಪರಾಜು ಆಯ್ಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ವಿರುದ್ಧ ಪರಾಭವಗೊಂಡರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂದು ಕಣದಲ್ಲಿ ಈಗಾಗಲೇ ಕಸರತ್ತು ಆರಂಭಿಸಿದ್ದಾರೆ.
ಅಸಮಾಧಾನ ಬಹಿರಂಗ
ಈ ಹಂತದಲ್ಲಿ ಕಾರ್ಯಕರ್ತರ ಪತ್ರ ತಿಪ್ಪರಾಜು ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಬೆಳವಣಿಗೆ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ವಿಷಯದಲ್ಲಿ ಭಿನ್ನಾಭಿಪ್ರಾಯ ಇರುವುದು ಬಹಿರಂಗವಾಗಿದೆ.
ಬೆಂಬಲಿಗರ ಟಾಂಗ್
ಪಕ್ಷದಲ್ಲಿ ಕೆಲವರು ಮುಗ್ಧ ಕಾರ್ಯಕರ್ತರನ್ನು ಎತ್ತಿಕಟ್ಟಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯಿಸಿದ್ದಾರೆ. ಅದರೆ ಇಂತಹ ಯಾವುದೇ ಕೀಳು ಮಟ್ಟದ ಗಿಮಿಕ್ಗಳಿಂದ ನಮ್ಮ ನಾಯಕನಿಗೆ ಟಿಕೇಟ್ ತಪ್ಪಿಸಲು ಸಾಧ್ಯವಿಲ್ಲ ಎಂದು ಬೆಂಬಲಿಗರು ಟಾಂಗ್ ನೀಡಿದ್ದಾರೆ.
ಏನೇ ಆದರೂ ಆಂತರಿಕ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ತಿಪ್ಪರಾಜು ಯಾವ ತಂತ್ರಕ್ಕೆ ಮೊರೆ ಹೋಗುತ್ತಾರೆ? ಕಾರ್ಯಕರ್ತರ ವಿಶ್ವಾಸ ಗಳಿಸದಿದ್ದರೆ 2023 ಚುನಾವಣೆ ತಿಪ್ಪರಾಜು ಹವಾಲ್ದಾರ್ ಹಾದಿ ಕಠಿಣವಾಗಲಿದೆ. ಕಾರ್ಯಕರ್ತರ ಅಸಮಾಧಾನ ನಿವಾರಣೆಗೆ ಹವಾಲ್ದಾರ್ ಯಾವ ಹಾದಿ ಹಿಡಿಯುತ್ತಾರೆ ಎಂದು ಕಾದು ನೋಡಬೇಕಿದೆ.